ಶಿಕ್ಷಣ ಕ್ಷೇತ್ರದ ಅಪಾರ ಅಭಿವೃದ್ಧಿಯಲ್ಲಿ ಹೊರಟ್ಟಿ ಅವರದ್ದು ಪ್ರಮುಖ ಪಾತ್ರ: ಸಿಎಂ ಬೊಮ್ಮಾಯಿ

ಬಸವರಾಜ ಹೊರಟ್ಟಿಯವರು ಶಿಕ್ಷಣ ಸಚಿವರಾಗಿ ತಂದಿರುವ ಬದಲಾವಣೆ, ಶಿಕ್ಷಣ ಕ್ಷೇತ್ರಕ್ಕೆ ಸ್ಥಿರತೆಯನ್ನು ಕೊಟ್ಟಿದೆ.  ಶಿಕ್ಷಕರ ಪ್ರತಿನಿಧಿಯಾಗಿದ್ದರೂ ಒಬ್ಬ ಆಡಳಿತಗಾರರಾಗಿ ಕಠಿಣ ನಿರ್ಣಯಗಳನ್ನು ತೆಗೆದುಕೊಂಡಿರುವ ಕಾರಣ, ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.  ಶಿಕ್ಷಕರ ವರ್ಗಾವಣೆ, ಶಿಕ್ಷಕರ ಸವಲತ್ತು, ಹೈಸ್ಕೂಲ್ ಹಾಗೂ ಕಾಲೇಜು ನಿರ್ಮಾಣ ಸೇರಿದಂತೆ ಹಲವು ದಾಖಲಾರ್ಹ ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಕರ ಕೆಲಸಗಳನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ್ದಾರೆ  ಎಂದರು.

Written by - Prashobh Devanahalli | Edited by - Bhavishya Shetty | Last Updated : Dec 21, 2022, 02:25 PM IST
    • ಶಿಕ್ಷಣ ಕ್ಷೇತ್ರದ ಅಪಾರ ಅಭಿವೃದ್ಧಿಯಲ್ಲಿ ಬಸವರಾಜ ಹೊರಟ್ಟಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ
    • ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾಗಿ ಅವಿರೋಧ ಆಯ್ಕೆ
    • ಬಸವರಾಜ ಹೊರಟ್ಟಿಯವರನ್ನು ಅಭಿನಂದಿಸಿ ಮಾತನಾಡಿದ ಸಿಎಂ ಬೊಮ್ಮಾಯಿ
ಶಿಕ್ಷಣ ಕ್ಷೇತ್ರದ ಅಪಾರ ಅಭಿವೃದ್ಧಿಯಲ್ಲಿ ಹೊರಟ್ಟಿ ಅವರದ್ದು ಪ್ರಮುಖ ಪಾತ್ರ: ಸಿಎಂ ಬೊಮ್ಮಾಯಿ title=
Basavaraja Horatti

ಬೆಳಗಾವಿ: ಸ್ವಾತಂತ್ರ್ಯ ನಂತರ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಅಪಾರ ಅಭಿವೃದ್ಧಿಯಲ್ಲಿ ಬಸವರಾಜ ಹೊರಟ್ಟಿಯವರು  ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾಗಿ ಅವಿರೋಧ ಆಯ್ಕೆಯಾದ ಬಸವರಾಜ ಹೊರಟ್ಟಿಯವರನ್ನು ಅಭಿನಂದಿಸಿ ಮಾತನಾಡಿದರು.

ಬಸವರಾಜ ಹೊರಟ್ಟಿಯವರು ಶಿಕ್ಷಣ ಸಚಿವರಾಗಿ ತಂದಿರುವ ಬದಲಾವಣೆ, ಶಿಕ್ಷಣ ಕ್ಷೇತ್ರಕ್ಕೆ ಸ್ಥಿರತೆಯನ್ನು ಕೊಟ್ಟಿದೆ.  ಶಿಕ್ಷಕರ ಪ್ರತಿನಿಧಿಯಾಗಿದ್ದರೂ ಒಬ್ಬ ಆಡಳಿತಗಾರರಾಗಿ ಕಠಿಣ ನಿರ್ಣಯಗಳನ್ನು ತೆಗೆದುಕೊಂಡಿರುವ ಕಾರಣ, ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.  ಶಿಕ್ಷಕರ ವರ್ಗಾವಣೆ, ಶಿಕ್ಷಕರ ಸವಲತ್ತು, ಹೈಸ್ಕೂಲ್ ಹಾಗೂ ಕಾಲೇಜು ನಿರ್ಮಾಣ ಸೇರಿದಂತೆ ಹಲವು ದಾಖಲಾರ್ಹ ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಕರ ಕೆಲಸಗಳನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ್ದಾರೆ  ಎಂದರು.

ಇದನ್ನೂ ಓದಿ: ಗೆಟ್ ಔಟ್" ಕುಣಿಗಲ್ ರಂಗನಾಥ್ ಗೆ ಗದರಿದ ಸಚಿವ ಕಾರಜೋಳ; ಕೈ- ಬಿಜೆಪಿ ವಾಕ್ಸಮರ

ಅನುಭವಕ್ಕೆ ಮನ್ನಣೆ :

ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿಯವರು ಸರ್ವಾನುಮತದಿಂದ ಆಯ್ಕೆಆಗಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ. ತಮ್ಮ ಹಿರಿತನಕ್ಕೆ, ತಮ್ಮ ಅನುಭವಕ್ಕೆ ಇಡೀ ಸದನ ಮನ್ನಣೆಯನ್ನು ಕೊಟ್ಟಿದೆ. ಸಾಮಾನ್ಯವಾಗಿ ಸಭಾಪತಿ ಸ್ಥಾನಕ್ಕೆ ಒಮ್ಮತದ ಆಯ್ಕೆಯಾಗುವುದು ಈ ಸದನದ ಗೌರವವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಸದನದ ಹಿರಿಯ ಸದಸ್ಯರಾಗಿ ತಾವು ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸಿ, ಎಲ್ಲರ  ಸ್ನೇಹ ಮತ್ತು ವಿಶ್ವಾಸವನ್ನು ಗಳಿಸಿರುವ ಹಿನ್ನೆಲೆಯಲ್ಲಿ  ಪಕ್ಷಾತೀತವಾಗಿ ತಮ್ಮನ್ನು ಆಯ್ಕೆ ಮಾಡಿರುವುದು ವಿಧಾನಪರಿಷತ್ತಿನ ಸರ್ವ ಸದಸ್ಯರಿಗೆ  ಅಬಭಿನಂದನೆಗಳನ್ನು ಸಲ್ಲಿಸುತ್ತೇನೆ.  ಹಿರಿಯನ ಸದನ ಎಂದು ಕರೆಯಲ್ಪಡುವ ವಿಧಾನಪರಿಷತ್ತಿನ ಕೀರ್ತಿಯಂತೆ ಎಲ್ಲರೂ ನಡೆದುಕೊಂಡಿರುವುದಕ್ಕೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಸಲ್ಲಿಸಿದರು.

ಮತದಾರರ ಹಿತಚಿಂತನೆಯನ್ನು ಉಸಿರಾಗಿಸಿಕೊಂಡವರು:

ನಾನು ತಮ್ಮ ಮೊದಲ ಚುನಾವಣೆಯಿಂದ ಬಲ್ಲೆ. ಸಾರ್ವಜನಿಕ ಜೀವನವನ್ನು ಪ್ರಾರಂಭ ಮಾಡುವುದರ ಪೂರ್ವದಲ್ಲಿ ಶಿಕ್ಷಕರಾಗಿ, ಶಿಕ್ಷಕರ ಸಂಘಟನೆಯಲ್ಲಿ ಒಳ್ಳೆಯ ಕೆಲಸವನ್ನು ಮಾಡಿ, ಎಲ್ಲ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದೀರಿ. ಸಾರ್ವಜನಿಕ ಜೀವನಕ್ಕೆ  ಕಾಲಿಟ್ಟ ಮೇಲೆ ಮೊದಲನೇ ಚುನಾವಣೆ ಬಹಳ ಪ್ರಮುಖವಾಗಿತ್ತು.  ತಮ್ಮ ಸ್ವಂತ ಶಕ್ತಿಯ ಮೇಲೆ ಗೆದ್ದು ಬಂದರು. ತಾವೆಂದೂ ಹಿಂದುರುಗಿ ನೋಡಿಲ್ಲ. ಪ್ರತಿ ಬಾರಿ ಚುನಾವಣೆಯಲ್ಲಿ ಯಶಸ್ವಿಯಾಗುವು ಅಷ್ಟೇ ಅಲ್ಲ, ತಮ್ಮ ಕಾರ್ಯಪ್ರವೃತ್ತಿ ಕರ್ತವ್ಯ ಪ್ರಜ್ಞೆಯಿಂದ ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಂಡೇ ಬಂದವರು. 40 ವರ್ಷಕ್ಕಿಂತ ಹೆಚ್ಚು ತಮ್ಮ ಸಾರ್ವಜನಿಕ ಬದುಕು ಆದರ್ಶಪ್ರಾಯವಾಗಿದೆ. ತಮ್ಮ ಕಾರ್ಯಶೈಲಿ, ಮತದಾರರ ಹಿತಚಿಂತನೆಯನ್ನು ಉಸಿರಾಗಿಸಿಕೊಂಡು ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ ಎಂದರು.

ಎಲ್ಲ ಮುಖ್ಯಮಂತ್ರಿಗಳ ಜೊತೆಗೆ ಆತ್ಮೀಯರು :

ನೇರಮಾತು ಮತ್ತು ನಿಷ್ಟುರವಾಗಿ ಕೆಲವು ಮಾತುಗನ್ನಾಡುವ ಸ್ವಭಾವದವರು. ಯಾರ ಬಗ್ಗೆಯೂ ಸಣ್ಣ ಕಲ್ಮಷವಿಲ್ಲದಂತೆ ನಡೆದುಕೊಂಡಿಕೊಂಡಿದ್ದು, ಬಹಳ ಮಿತ್ರರನ್ನು ಸಂಪಾದಿಸಿದ್ದಾರೆ. ಎಲ್ಲ ಮುಖ್ಯಮಂತ್ರಿಗಳ ಜೊತೆಗೆ ಆತ್ಮೀಯರಾಗಿದ್ದಾರೆ. ಯಾವುದೇ ಪಕ್ಷದಲ್ಲಿದ್ದರೂ ಅವರ ಕೆಲಸ ನಡೆಯುತ್ತದೆ.  ಬಾಗಲಕೋಟೆ ಜಿಲ್ಲೆಯವರಾದರೂ ಹೆಚ್ಚಿನ ಸಮಯ ಹುಬ್ಬಳ್ಳಿಯಲ್ಲಿ ಕಳೆದಿದ್ದು, ಹುಬ್ಬಳ್ಳಿಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಸ್ನೇಹಪರವಾಗಿದ್ದು , ಮಹತ್ವಪೂರ್ಣ ಕೆಲಸವನ್ನು ಮಾಡಿದ್ದಾರೆ. ಉತ್ತರ ಕರ್ನಾಟಕ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಹುಬ್ಬಳ್ಳಿಗೆ  ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಹೊರಟ್ಟಿಯವರು ಪ್ರಮುಖ ಪಾತ್ರ ವಹಿಸಿದ್ದರು.  ಧಾರವಾಡಕ್ಕೆ ವಿಜ್ಞಾನ ನಗರ ತರಲು ಯಶಸ್ವಿಯಾಗಿದ್ದರು. ಆ ಭಾಗದ ಜ್ವಲಂತ ಸಮಸ್ಯೆಗಳ ಧ್ವನಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಸಾಗರದಲ್ಲಿ ಸದ್ದಿಲ್ಲದೆ ಬೇಟೆಯಾಡೋ ರಣಬೇಟೆಗಾರ ನೌಕಾಪಡೆಗೆ ಎಂಟ್ರಿ: ನಿಮಿಷದಲ್ಲಿ ಶತ್ರುನಾಶ ಖಂಡಿತ

ಸಭಾಪತಿಗಳ ನೇತೃತ್ವದಲ್ಲಿ ಜನಸ್ಪಂದನೆಯ ನಿರ್ಣಯಗಳಾಗಲಿ :

ಪಕ್ಷವನ್ನು ಮೀರಿ ನಿಲುವನ್ನು ತೆಗೆದುಕೊಂಡು, ಜನರಿಗೆ ನ್ಯಾಯ ಒದಗಿಸಿದ್ದಾರೆ. ವಿಧಾನಸಭೆಯ ಬಗ್ಗೆ ಅಪಾರ ಅನುಭವವಿದೆ.  ಬೆಳಗಾವಿ ಅಧಿವೇಶನದಲ್ಲಿ  ಉತ್ತರ ಕರ್ನಾಟಕದವರು ಸಭಾಪತಿಗಳಾಗಿರುವುದು  ನಮಗೆಲ್ಲಾ ಸಂತೋಷ ತಂದಿದೆ.  ತಮ್ಮ ಸ್ಥಾನದಿಂದ ಈ ಸದನದಲ್ಲಿ ಅರ್ಥಪೂರ್ಣ ಚರ್ಚೆಯಾಗಿ, ಜನಸ್ಪಂದನೆಯ ನಿರ್ಣಯಗಳಾಗಿ, ಜನರ ಹತ್ತು ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆತು, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕುವ ಕೆಲಸ ತಮ್ಮ ನೇತೃತ್ವದಲ್ಲಿ  ನಡೆಯಲಿ. ನ್ಯಾಯಸಮ್ಮತವಾದ ವಿಚಾರ, ಕಲಾಪಗಳು ಎಲ್ಲರಿಗೂ ಮಾದರಿಯಾಗಲಿ. ಸದನ ಹಿರಿಯರ ಮನೆಯಾಗಿದ್ದು, ಆ ಹಿರಿತನವನ್ನು ಉಳಿಸಿಕೊಂಡು, ಇದಕ್ಕೆ  ಮೆರಗು ಬರುವಂತೆ ಇಲ್ಲಿನ ಕಲಾಪಗಳು ತಮ್ಮ ನೇತರತ್ವದಲ್ಲಿ ಆಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News