ನವದೆಹಲಿ: ತಾಜ್ ಮಹಲ್ ಸಂರಕ್ಷಣೆಯಲ್ಲಿ ಕಳಪೆ ನಿರ್ವಹಣೆ ತೋರಿರುವ ವಿಚಾರವಾಗಿ ಈಗ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಯೋಗಿ ಸರ್ಕಾರಕ್ಕೆ ಚಾಟಿ ಬೀಸಿದೆ.
ಈ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಎಸ್.ಎ.ಬಾಬಡೆ ನೇತೃತ್ವದ ದ್ವಿಸದಸ್ಯ ಪೀಠ ತಾಜ್ ಮಹಲ್ ಸಂರಕ್ಷಣೆಯ ನಿಟ್ಟಿನಲ್ಲಿ ನಾಲ್ಕು ವಾರಗಳ ಒಳಗೆ ವರದಿಯನ್ನು ಸಿದ್ದಪಡಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ವಿಚಾರಣೆ ವೇಳೆ ಪೀಠವು "ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾಗಿರುವ ಸ್ಮಾರಕದ ಸಂರಕ್ಷಣೆ ನಿಟ್ಟಿನಲ್ಲಿ ನಮಗೆ ಕಳವಳ ಮತ್ತು ಕಾಳಜಿ ಇದೆ" ಎಂದು ಅಭಿಪ್ರಾಯಪಟ್ಟಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ವರದಿಯ ಪ್ರಕಾರ ಆಗ್ರಾದಲ್ಲಿನ ಮಾಲಿನ್ಯದಿಂದಾಗಿ ತಾಜ್ ಮಹಲ್ ಸ್ಮಾರಕದ ಬಣ್ಣವು ಬದಲಾಗಿದೆಯೆಂದು ತಿಳಿಸಿತ್ತು.ಕಳೆದ ಕೆಲವು ವರ್ಷಗಳಿಂದ ತಾಜ್ ಮಹಲ್ ನಿರ್ವಹಣೆ ವಿಚಾರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪದೇ ಪದೇ ವಿಚಾರಣೆಗೆ ಆಹ್ವಾನಿಸುತ್ತಿದೆ.ಅಲ್ಲದೆ ಸರ್ಕಾರವು ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.