ನವದೆಹಲಿ: ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರು ಎನ್ಸಿಪಿಯ ಅಜಿತ್ ಪವಾರ್ ಜೊತೆಗಿನ 80 ಗಂಟೆಗಳ ಸರ್ಕಾರದ ಪತನಗೊಂಡಿರುವ ವಿಚಾರವಾಗಿ ಬಹಿರಂಗವಾಗಿ ಮಾತನಾಡಲು ಹಿಂದೇಟು ಹಾಕಿದ್ದಾರೆ.
ಇಂದು ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವೀಸ್ "ಸಾಹಿ ವಕ್ತ್ ಪೆ ಸಾಹಿ ಬಾತ್ ಕರುಂಗಾ....ಚಿಂತಾ ಮತ್ ಕರೋ (ನಾನು ಸೂಕ್ತ ಸಮಯದಲ್ಲಿ ಸರಿಯಾದ ವಿಷಯವನ್ನು ಹೇಳುತ್ತೇನೆ..ಚಿಂತಿಸಬೇಡಿ)" ಎಂದು ತಿಳಿಸಿದರು. ಎನ್ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಮತ್ತು ರಾಜ್ಯದಲ್ಲಿ ಸರ್ಕಾರ ರಚಿಸಿದ್ದು ತಪ್ಪಾಯಿತೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ.
ಶನಿವಾರ ಬೆಳಿಗ್ಗೆ ನಡೆದ ವಿವಾದಾತ್ಮಕ ಸಮಾರಂಭದಲ್ಲಿ ಫಡ್ನವೀಸ್ ಎರಡನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಮ್ಮ ಪಕ್ಷದ 54 ಶಾಸಕರಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದ ಎನ್ಸಿಪಿಯ ಅಜಿತ್ ಪವಾರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.ಬಿಜೆಪಿಯನ್ನು ಬೆಂಬಲಿಸುವುದು ಅಜಿತ್ ಪವಾರ್ ಅವರ ಸೋದರಳಿಯ ವೈಯಕ್ತಿಕ ನಿರ್ಧಾರ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅಲ್ಲಗಳೆದು 'ಗೊಂದಲವನ್ನು ಸೃಷ್ಟಿಸುವ ಸಲುವಾಗಿ ಸುಳ್ಳು ಮತ್ತು ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಮಂಗಳವಾರ ಸುಪ್ರೀಂ ಕೋರ್ಟ್ 24 ಗಂಟೆಗಳ ಒಳಗೆ ವಿಶ್ವಾಸಮತ ಸಾಬೀತಿಗೆ ಆದೇಶಿಸಿದ ಕೆಲವೇ ಗಂಟೆಗಳ ನಂತರ ಶಾಸಕರ ಬೆಂಬಲವಿಲ್ಲದ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್ ಕೂಡ ರಾಜೀನಾಮೆ ನೀಡಿದರು.