BBK10: ಜೋರು ಧ್ವನಿ; ಸ್ನೇಹದ ಖನಿ – ತನಿಷಾ ಕುಪ್ಪಂಡ ಬಿಗ್‌ಬಾಸ್‌ ಜರ್ನಿ!

Tanisha Out From BBK House:ಅಂತಿಮ ಹಂತಕ್ಕೆ ಒಂದೇ ಒಂದು ಹೆಜ್ಜೆ ಬಾಕಿ ಇರುವಾಗಲೇ ತನಿಷಾ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ. ತನಿಷಾ ಕುಪ್ಪಂಡ ಬಿಗ್‌ಬಾಸ್‌ ಜರ್ನಿಯ ಹಲವು ಮುಖ್ಯ ಘಟ್ಟಗಳ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ.  

Written by - Savita M B | Last Updated : Jan 19, 2024, 09:59 AM IST
  • ಬಿಗ್‌ಬಾಸ್‌ ಗ್ರ್ಯಾಂಡ್ ಪ್ರೀಮಿಯರ್‌ನ ಝಗಮಗಿಸುವ ವೇದಿಕೆ
  • ಆ ವಿಶ್ವಾಸವೇ ಅವರನ್ನು ಬಿಗ್‌ಬಾಸ್ ಮನೆಯೊಳಗೆ ನೂರನೇ ದಿನದ ಗಡಿಯನ್ನೂ ದಾಟುವಂತೆ ಮಾಡಿದೆ.
  • ಅಂತಿಮ ಹಂತಕ್ಕೆ ಒಂದೇ ಒಂದು ಹೆಜ್ಜೆ ಬಾಕಿ ಇರುವಾಗಲ ತನಿಷಾ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ.
BBK10: ಜೋರು ಧ್ವನಿ; ಸ್ನೇಹದ ಖನಿ – ತನಿಷಾ ಕುಪ್ಪಂಡ ಬಿಗ್‌ಬಾಸ್‌ ಜರ್ನಿ!  title=

Bigg Boss Kannada 10:  ‘ಎಷ್ಟು ವಿಶ್ವಾಸ ನಿಮ್ಮಲ್ಲಿದೆ?’
ಬಿಗ್‌ಬಾಸ್‌ ಗ್ರ್ಯಾಂಡ್ ಪ್ರೀಮಿಯರ್‌ನ ಝಗಮಗಿಸುವ ವೇದಿಕೆಯಲ್ಲಿ ಸುದೀಪ್‌ ಈ ಪ್ರಶ್ನೆಯನ್ನು ಕೇಳಿದಾಗ ತನಿಷಾ ಕುಪ್ಪಂಡ ಕ್ಷಣಮಾತ್ರವೂ ಯೋಚಿಸದೆ, ‘very much’ ಎಂದಿದ್ದರು. ಆ ಮಾತಿನಲ್ಲಷ್ಟೇ ಅಲ್ಲ, ಅವರ ನಿಲುವಿನಲ್ಲಿ, ಮುಖದಲ್ಲಿ, ನಗುವಿನಲ್ಲಿಯೂ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. 

ಆ ವಿಶ್ವಾಸವೇ ಅವರನ್ನು ಬಿಗ್‌ಬಾಸ್ ಮನೆಯೊಳಗೆ ನೂರನೇ ದಿನದ ಗಡಿಯನ್ನೂ ದಾಟುವಂತೆ ಮಾಡಿದೆ. ಅಂತಿಮ ಹಂತಕ್ಕೆ ಒಂದೇ ಒಂದು ಹೆಜ್ಜೆ ಬಾಕಿ ಇರುವಾಗಲ ತನಿಷಾ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದಿದ್ದಾರೆ. JioCinemaದಲ್ಲಿ ವೀಕ್ಷಣೆಗೆ ಲಭ್ಯವಿರುವ ತನಿಷಾ ಕುಪ್ಪಂಡ ಬಿಗ್‌ಬಾಸ್‌ ಜರ್ನಿಯ ಹಲವು ಮುಖ್ಯ ಘಟ್ಟಗಳ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ.

ಇದನ್ನೂ ಓದಿ-BBK 10: ಫಿನಾಲೆಗೆ ದಿನಗಣನೆ ಬೆನ್ನಲ್ಲೇ ವಿನ್ನರ್ ಹೆಸರು ರಿವೀಲ್! ಹೈ ಸ್ಪೀಡ್’ನಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡ ಈ ಸ್ಪರ್ಧಿಗೆ ‘ಬಿಗ್ ಬಾಸ್’ ವಿಜೇತ ಪಟ್ಟ!

ತನಿಷಾ ವಿಶ್ವಾಸಕ್ಕೆ ಮೊದಲ ಪೆಟ್ಟು ಬಿದ್ದಿದ್ದೂ ಅದೇ ಗ್ರ್ಯಾಂಡ್‌ ಪ್ರೀಮಿಯರ್‌ ವೇದಿಕೆಯಲ್ಲಿಯೇ! ಜನರ ವೋಟ್‌ಗಳ ಕೊರತೆಯಿಂದ ಅವರನ್ನು ಹೋಲ್ಡ್‌ನಲ್ಲಿ ಇರಿಸಲಾಯಿತು. ನಂತರ ‘ಅಸಮರ್ಥ’ ಎಂಬ ಪಟ್ಟ ಹೊತ್ತುಕೊಂಡೇ ಮನೆಯೊಳಗೆ ಎಂಟ್ರಿ ಕೊಟ್ಟರು. ಈಗಾಗಲೇ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ‘ಸಮರ್ಥ’ರು ಮನೆಯೊಳಗಿನ ಎಲ್ಲ ಸೌಕರ್ಯಗಳನ್ನು ಬಳಸಿಕೊಂಡು ಮೆರೆಯುತ್ತಿದ್ದರೆ, ತನಿಷಾ ತನ್ನ ‘ಅಸಮರ್ಥ’ ಜೊತೆಗಾರರೊಂದಿಗೆ ನೆಲದಲ್ಲಿ ಕುಳಿತಿದ್ದರು. ಆದರೆ ಅವರ ಮನಸ್ಸಿನಲ್ಲಿ ವಿಶ್ವಾಸ ಮಾತ್ರ ಕೊಂಚವೂ ಕಡಿಮೆಯಾಗಿರಲಿಲ್ಲ.
  
ನಾಮಿನೇಷನ್‌ ಗನ್‌ಗೆ ಗುರಿಯಾದ ಎರಡನೇ ಸ್ಪರ್ಧಿ!
ಅಷ್ಟೇ ಅಲ್ಲ, ಮೊದಲ ವಾರ ಎಲಿಮಿನೇಷನ್‌ನ ಎರಡನೇ ಬಣ್ಣದ ಗುಂಡು ಬಿದ್ದಿದ್ದೂ ತನಿಷಾ ಕುಪ್ಪಂಡ ಮುಖಕ್ಕೆ. ನಾಮಿನೇಟ್ ಮಾಡಿದ ನಮ್ರತಾ ನೀಡಿದ ಕಾರಣಗಳಲ್ಲಿಯೇ ತನಿಷಾ ಅವರ ‘ಧ್ವನಿ’ಯ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಅದು ಆರಂಭವಷ್ಟೇ. ಈ ಸೀಸನ್‌ ಪಯಣದುದ್ದಕ್ಕೂ ತನಿಷಾ ಧ್ವನಿಯೆತ್ತರಿಸಿ ಮಾತಾಡುತ್ತಾರೆ ಎಂಬುದು ಒಂದು ಆರೋಪದ ಹಾಗೆ ಪದೇ ಪದೇ ಕೇಳಿಬರುತ್ತಲೇ ಇತ್ತು. ಅವರನ್ನು ನಾಮಿನೇಟ್ ಮಾಡುವ ಬಹುತೇಕ ಸದಸ್ಯರು ನೀಡುತ್ತಿದ್ದ ಕಾರಣಗಳಲ್ಲಿ ಅದೂ ಒಂದಾಗಿರುತ್ತಿತ್ತು. ಆದರೆ ಅಂದು ನಾಮಿನೇಷನ್‌ಗೆ ಒಳಗಾದ ತನಿಷಾ ಅಸಮರ್ಥರು ಸಮರ್ಥರಾಗುವ ಟಾಸ್ಕ್‌ಗಳಲ್ಲಿ ತೋರಿದ ಪ್ರದರ್ಶನ ಸಮರ್ಥರ ಎದೆಯಲ್ಲಿಯೂ ಅಳುಕು ಹುಟ್ಟಿಸಿದ್ದಂತೂ ನಿಜ. 

ಟಾಸ್ಕ್‌ಗೂ ಸೈ; ಮನರಂಜನೆಗೂ ಜೈ!
ಟಾಸ್ಕ್‌ ವಿಷಯವೇ ಇರಲಿ, ಮನೆಯ ಉಳಿದ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂದರ್ಭವೇ ಇರಲಿ. ತನಿಷಾ ಎಂದೂ ಹಿಂದೆ ಬಿದ್ದವರಲ್ಲ. ಕೆಲವೊಮ್ಮೆ ತಮ್ಮ ತಂಡ, ತಮ್ಮ ಸ್ನೇಹಿತರನ್ನು ವಹಿಸಿಕೊಂಡು ಜಗಳಕ್ಕೆ ನಿಲ್ಲಲೂ ಹಿಂಜರಿದವರಲ್ಲ. ಫಿಜಿಕಲ್‌ ಟಾಸ್ಕ್‌ಗಳಾಗಲಿ, ಬುದ್ಧಿವಂತಿಕೆಯ ಆಟಗಳಾಗಲಿ, ಪ್ರತಿವಾರ ಮನೆಗೆ ಲಕ್ಷುರಿ ಬಜೆಟ್ ಬರೆಯುವ ಚಟುವಟಿಕೆಯೇ ಇರಲಿ ತನಿಷಾ ಮುಂದಿರುತ್ತಿದ್ದರು. ಇದರಾಚೆಗೆ ಅವರೊಳಗಿನ ಕಮಿಡಿಯನ್‌ ಹೊರಬಂದಿದ್ದು, ‘ಬೃಂದಾವನ’ ಧಾರಾವಾಹಿ ತಂಡ ಮನೆಗೆ ಭೇಟಿ ನೀಡಿದಾಗ. ಭಾಗ್ಯಶ್ರೀ, ತುಕಾಲಿ ಸಂತೋಷ್‌ ಜೊತೆಗೆ ಸೇರಿ ಅವರು ಪ್ರಸ್ತುತಪಡಿಸಿದ ಸ್ಕಿಟ್‌ಗಳಲ್ಲಿ ಅವರ ಟೈಮಿಂಗ್, ಹಾಸ್ಯಪ್ರಜ್ಞೆ ಅಷ್ಟೇ ಅಲ್ಲ, ಸಹಸ್ಪರ್ಧಿಗಳ ಜೊತೆಗಿನ ಬಾಂಧವ್ಯವನ್ನೂ ತೋರಿಸುವಂತಿತ್ತು. 

ಜಿಯೊ ಸಿನಿಮಾ ಫನ್‌ ಫ್ರೈಡೆಯಲ್ಲಿ ತನಿಷಾ ಧಮಾಕಾ!
ವಾರವಿಡೀ ಬಗೆಬಗೆಯ ಟಾಸ್ಕ್‌ಗಳಲ್ಲಿ ಜಿದ್ದಿಗೆ ಬಿದ್ದು ಆಡಿದ ಸದಸ್ಯರಿಗೆ ರಿಲ್ಯಾಕ್ಸ್‌ ಆಗಿ ಒದಗಿಬರುತ್ತಿದ್ದದ್ದು ಪ್ರತಿ ಶುಕ್ರವಾರದ JioCinema ಫನ್ ಫ್ರೈಡೆ ಟಾಸ್ಕ್‌. ಈ ಸೀಸನ್‌ನ ಮೊದಲ ಫನ್‌ಫ್ರೈಡೆ ವಿನ್ನರ್ ಆಗಿ ಹೊರಹೊಮ್ಮಿದ್ದು ತನಿಷಾ! ‘ಮ್ಯೂಜಿಕಲ್‌ ಪಾಟ್‌’ ಟಾಸ್ಕ್‌ನಲ್ಲಿ ಸ್ಪರ್ಧೆಯೇನೋ ತುರುಸಿನದೇ ಆಗಿತ್ತು. ಆ ಸ್ಪರ್ಧೆಯಲ್ಲಿ ಕೊನೆಯ ಹಂತದಲ್ಲಿ ಸಿರಿ ಮತ್ತು ತನಿಷಾ ಉಳಿದುಕೊಂಡಿದ್ದರು. ಅವರಿಬ್ಬರ ನಡುವೆ ನಡೆದ ಜಿದ್ದಿನ ಸ್ಪರ್ಧೆಯಲ್ಲಿ ತನಿಷಾ, ಸಿರಿ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದರು. ಆ ಗೆಲುವು ಬರೀ ಒಂದು ಟಾಸ್ಕ್‌ನ ಗೆಲುವಷ್ಟೇ ಆಗಿರಲಿಲ್ಲ. ಬಿಗ್‌ಬಾಸ್ ಮನೆಯಲ್ಲಿ ತಾವು ಬಹುದೂರದವರೆಗೆ ಪ್ರಯಾಣಿಸಲಿದ್ದೇನೆ ಎಂದು ತನಿಷಾ ನೀಡಿದ ಸೂಚನೆಯೂ ಆಗಿತ್ತು.

ಸ್ನೇಹಕ್ಕೆ ಸಿದ್ಧ; ಸಮರಕ್ಕೂ ಬದ್ಧ!
ತನ್ನ ತಾಯಿ ಮತ್ತು ತಮ್ಮ ನೆಚ್ಚಿನ ನಾಯಿ ಈ ಇಬ್ಬರನ್ನು ಬಿಟ್ಟರೆ ಇನ್ಯಾರನ್ನಾದರೂ ನಾನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದರೆ ಅದು ಫಿಪ್ಟಿ ಫಿಪ್ಟಿ ಅಷ್ಟೇ ಆಗಿರುತ್ತದೆ ಎಂದು ಹೇಳಿಯೇ ಮನೆಯೊಳಗೆ ಹೋಗಿದ್ದ ತನಿಷಾ, ಬಿಗ್‌ಬಾಸ್ ಮನೆಯೊಳಗೆ ಹಲವು ಸಂಬಂಧಗಳನ್ನು ಹಾದು ಬಂದಿದ್ದಾರೆ. ಅವುಗಳಲ್ಲಿ ಆರಂಭದ ವಾರದಿಂದ ಸಂಗೀತಾ ಮತ್ತು ಕಾರ್ತಿಕ್ ಜೊತೆಗೆ ಮೂಡಿದ ಸ್ನೇಹ ಸಂಬಂಧ ವಿಶೇಷವಾದದ್ದು. ಈ ಮೂವರ ಸ್ನೇಹ ಮನೆಯೊಳಗೇ ಹಲವರ ಕುಹುಕಕ್ಕೆ, ಜಲಸಿಗೂ ಕಾರಣವಾಗಿದ್ದೂ ನಿಜ. ಒಬ್ಬರಿಗೊಬ್ಬರು ಬಿಟ್ಟುಕೊಡದೆ, ಒಬ್ಬರನ್ನೊಬ್ಬರು ಬೆಂಬಲಿಸಿಕೊಂಡೇ ಬರುತ್ತಿದ್ದರು. ಆದರೆ ಒಂದು ಹಂತದಲ್ಲಿ ಸಂಗೀತಾ, ತಮ್ಮ ಎದುರಾಳಿಗಳಾದ ವಿನಯ್ ತಂಡವನ್ನು ಸೇರಿಕೊಂಡಾಗಲೇ ಈ ತ್ರಿಕೋನ ಸ್ನೇಹಸಂಬಂಧದಲ್ಲಿ ಮೊದಲ ಬಿರುಕು ಕಾಣಿಸಿಕೊಂಡಿದ್ದು. ಪರಸ್ಪರ ಎದುರಾಳಿಗಳಾಗಿದ್ದಾಗ ತನಿಷಾ ಮತ್ತು ಸಂಗೀತಾ ಅವರ ನಡುವೆ ಹಲವು ಮಾತಿನ ಚಕಮಕಿಗಳು ನಡೆದವು. ಈ ಬಿರುಕು ಮುಂದೆಂದೂ ಸಂಪೂರ್ಣವಾಗಿ ಸರಿಹೋಗಲೇ ಇಲ್ಲ. 

ಕಾರ್ತಿಕ್ ಜೊತೆಗಿನ ಅವರ ಸ್ನೇಹ: 
ಸಂಗೀತಾ ಜೊತೆಗೆ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡಿದ್ದರೂ ಕಾರ್ತಿಕ್ ಜೊತೆಗಿನ ಅವರ ಸ್ನೇಹ ಮುಂದುವರಿದಿತ್ತು. ಒಂದು ಹಂತದಲ್ಲಂತೂ, ಕಾರ್ತೀಕ್, ತನಿಷಾ ಅವರನ್ನು ಸೇವ್ ಮಾಡಲಿಕ್ಕೋಸ್ಕರ ನಾನು ನಾಮಿನೇಟ್ ಆಗುತ್ತೇನೆ ಎನ್ನುವವರೆಗೂ ಹೋಗಿತ್ತು. ಆದರೆ ಅದೇ ಕಾರ್ತಿಕ್ ಕೆಲವು ವಾರಗಳ ಹಿಂದೆ, ‘ನಿಮ್ಮ ಗೇಮ್ ಸ್ಲೋ ಆಗಿದೆ’ ಎಂಬ ಕಾರಣ ನೀಡಿ ಹಾರ್ಟಿಗೆ ಚೂರಿ ಚುಚ್ಚಿ ನಾಮಿನೇಟ್ ಮಾಡಿದಾಗ, ತನಿಷಾ ಬ್ರೋಕ್‌ಡೌನ್ ಆಗಿಬಿಟ್ಟಿದ್ದರು. ಅದೇ ಸಿಟ್ಟಿನಲ್ಲಿ ‘ನಾನು ಬೆಂಕಿ. ನನ್ನ ಹಾರ್ಟಿಗೆ ಚೂರಿ ಹಾಕಲು ಬಂದರೆ ಸುಟ್ಟು ಬೂದಿಯೂ ಸಿಗದಂತೆ ಮಾಡುತ್ತೇನೆ’ ಎಂದು ಕಾರ್ತಿಕ್‌ಗೆ ಅವಾಜ್ ಹಾಕಿದ್ದರು. ಅಲ್ಲಿಗೆ ಬಿಗ್‌ಬಾಸ್ ಮನೆಯಲ್ಲಿಯೇ ಶುರುವಾದ ಅಪೂರ್ವ ಸ್ನೇಹದ ಅಧ್ಯಾಯವೊಂದು ಅಲ್ಲಿಯೇ ಕೊನೆಯಾದಂತಿತ್ತು.

ಇದನ್ನೂ ಓದಿ-ಪ್ರಭಾಸ್ ಮತ್ತು ಸಲ್ಮಾನ್ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡುವ ಭಾರತದ ಟಾಪ್ ಹೀರೋಯಿನ್ ಈಕೆ!

ವರ್ತೂರು ಸಂತೋಷ್ ಮತ್ತು ತನಿಷಾ ಬಾಂಧವ್ಯ

ಕಾರ್ತೀಕ್ ಮತ್ತು ಸಂಗೀತಾ ಜೊತೆಗಿನ ತನಿಷಾ ಅವರ ಸ್ನೇಹಬಂಧ ಒಂದು ಬಗೆಯದಾದರೆ, ವರ್ತೂರು ಸಂತೋಷ್ ಮತ್ತು ತನಿಷಾ ನಡುವಿನ ಸಂಬಂಧ ಇನ್ನೊಂದೇ ಬಗೆಯದಾಗಿತ್ತು. ಇದು ಶುರುವಾಗಿದ್ದು ಏಳನೇ ವಾರದಲ್ಲಿ ವರ್ತೂರು ಸಂತೋಷ್ ಅವರಿಗೆ ಎದುರಾಳಿಯಾಗಿ ಟಾಸ್ಕ್ ಆಡುವಾಗ ಕಾಲಿಗೆ ಗಾಯವಾಗಿ ತನಿಷಾ ಉಳಿದ ಟಾಸ್ಕ್ಗಳಿಂದ ಹೊರಗುಳಿಯಬೇಕಾಯ್ತು. ಈ ಘಟನೆಯ ನಂತರ ವರ್ತೂರು ಮತ್ತು ತನಿಷಾ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು. ಕೆಲವು ಸಲ ಇದೊಂದು ರೊಮ್ಯಾಂಟಿಕ್ ಸಂಬಂಧ ಅನಿಸಿದ್ದೂ ಇದೆ. ಆದರೆ ಎಂದಿಗೂ ನಾಮಿನೇಷನ್‌ನಲ್ಲಾಗಲಿ, ಟಾಸ್ಕ್‌ಗಳಲ್ಲಾಗಲಿ ಎದುರಾಳಿಗಳಾಗಲು ಹಿಂಜರಿದಿದ್ದಿಲ್ಲ. ‘ನನ್ನಿಂದ ಅವರ ಕಾಲಿಗೆ ಗಾಯವಾಗಿದೆ ಎಂಬ ನೋವಿದೆ. ಆದರೆ ಅದರ ಅನುಕಂಪದ ಮೇಲೆ ಏನನ್ನು ಮಾಡಲಾರೆ. ಮನುಷ್ಯತ್ವ, ಮಾನವೀಯತೆ ಅಂತ ಹೋದ್ರೆ ನಮ್ಮ ಹಿಂದೆ ಮುಂದೆ ಎರಡೂ ಗುಂಡಿ ತೋಡಿರ್ತಾರೆ’ ಎಂದು ವರ್ತೂರು ತನಿಷಾ ಎದುರಿಗೇ ಖಡಕ್ ಆಗಿ ಹೇಳಿದ್ದೂ ಇದೆ. ಆದರೆ ಈ ಮಾತುಗಳು, ಸ್ಪರ್ಧೆ ಅವರ ನಡುವಿನ ಬಂಧಕ್ಕೆ ಯಾವತ್ತೂ ಧಕ್ಕೆ ತಂದಿಲ್ಲ. ವರ್ತೂರು ಅವರು ರೊಮ್ಯಾಂಟಿಕ್ ಆಕ್ಟಿಂಗ್‌ಗೆ ತನಿಷಾ ಸ್ಪೂರ್ತಿಯಾಗಿದ್ದಂತೂ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ಮತ್ತೆ ಮಾಡಿಸಿ ನೋಡಿ ಆನಂದಿಸಿದ್ದರು. ಕಳೆದ ವಾರ ತನಿಷಾ, ‘ವರ್ತೂರು ಸಂತೋಷ್ ಅವರದ್ದು ನಿಷ್ಕಲ್ಮಷ ಸಂಬಂಧ. ನಾನು ಈ ಸಂಬಂಧವನ್ನು ಈ ಮನೆಯ ಆಚೆಗೂ ಉಳಿಸಿಕೊಳ್ಳಲು ಬಯಸುತ್ತೇನೆ’ ಎಂದಿದ್ದೂ ಅವರ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು.

ಹದಿನೈದು ವಾರದಲ್ಲಿ ಒಂದೇ ಒಂದು ಸಲ ಅವರು ಮನೆಯ ಸದಸ್ಯರಿಂದ ಕಳಪೆ ಪಟ್ಟ ಗಿಟ್ಟಿಸಿಕೊಂಡು ಜೈಲಿಗೆ ಹೋಗಿದ್ದರು ಎಂಬುದು ಅವರ ಸಾಮರ್ಥ್ಯವನ್ನೂ ಹೇಳುವಂತಿದೆ.
ಈಗ ಫಿನಾಲೆಯ ಹೊಸ್ತಿಲಲ್ಲಿ ತನಿಷಾ ಮನೆಯಿಂದ ಹೊರಗೆ ಬಿದ್ದಿದ್ದಾರೆ. ಅವರ ಜೊತೆ ಜಗಳವಾಡಿದವರು, ಅವರನ್ನು ನಿರಂತರವಾಗಿ ನಾಮಿನೇಟ್ ಮಾಡಿದವರು, ಅವರ ನಂಬಿಕೆ ಮುರಿದವರು, ಬೆಂಬಲಕ್ಕೆ ನಿಂತವರು ಎಲ್ಲ ಸ್ಪರ್ಧಿಗಳ ಕಣ್ಣಿನಲ್ಲಿಯೂ ತನಿಷಾ ಹೊರಹೋಗುವ ಸುದ್ದಿ ತಿಳಿದಾಗ ನೀರಿತ್ತು. ‘ನನ್ನ ಧ್ವನಿ ಎಲ್ಲರಿಗೂ ಸಮಸ್ಯೆಆಗಿತ್ತಲ್ವಾ? ಇನ್ನು ಮೇಲೆ ನನ್ನ ಧ್ವನಿ ಈ ಮನೆಯಲ್ಲಿ ಕೇಳಿಸುವುದಿಲ್ಲ’ ಎಂದು ತನಿಷಾ ಕಣ್ಣೀರು ಸುರಿಸುತ್ತ ಹೇಳಿದಾಗ ಎಲ್ಲರ ಹೃದಯಗಳೂ ಕರಗಿದ್ದವು. ಅದು ತನಿಷಾ ಈ ಮನೆಯೊಳಗಿನ ಸ್ಥಾನವನ್ನು ತಿಳಿಸುವಂತಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News