ನವದೆಹಲಿ: ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರದ ಪ್ರಧಾನಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಮೇ 23ರಂದು ಪ್ರಕಟವಾಗುವ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ನಿರ್ಧರಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಜನತೆಯ ನಿರ್ಧಾರ ಮೇ 23ರಂದು ಪ್ರಕಟವಾಗಿದೆ. ಅದಕ್ಕೂ ಮುನ್ನ ಪ್ರಧಾನಿ ಸ್ಥಾನದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಜನರ ತೀರ್ಪು ಹೊರಬೀಳುವ ಮುನ್ನ ಏನನ್ನೂ ಊಹಿಸಲು ಬಯಸುವುದಿಲ್ಲ. ಹಾಗಾಗಿ ಜನರ ನಿರ್ಧಾರದ ಆಧಾರದ ಮೇಲೆ ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ" ಎಂದು ರಾಹುಲ್ ಗಾಂಧಿ ಹೇಳಿದರು.
ಕೇಂದ್ರದಲ್ಲಿ ಎನ್ಡಿಎ ಸರ್ಕಾರವನ್ನು ತೊಲಗಿಸುವುದಷ್ಟೇ ಕಾಂಗ್ರೆಸ್ ಉದ್ದೇಶವಾಗಿರುವುದರಿಂದ ಪ್ರಧಾನ ಮಂತ್ರಿ ಸ್ಥಾನ ದೊರೆಯದಿದ್ದರೂ ಕಾಂಗ್ರೆಸ್ ಗೆ ಯಾವುದೇ ಸಮಸ್ಯೆಯಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಹೇಳಿಕೆ ನೀಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ನಿರ್ಧಾರ ಪ್ರಕಟಿಸಿದ್ದಾರೆ.