ಬಿಜೆಪಿಯವರ ಈ ದಬ್ಬಾಳಿಕೆಗೆ ನಾನು ಹೆದರುವುದಿಲ್ಲ-ರಾಹುಲ್ ಗಾಂಧಿ

ನಾನು ಸಂಸತ್ತಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಅದಾನಿ ಅವರ ಜತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದೆ. ಅದಕ್ಕೆ ಅವರು ನನ್ನ ಮೈಕ್ ಆಫ್ ಮಾಡಿ ನನ್ನನ್ನು ಸಂಸತ್ತಿನಿಂದ ಅನರ್ಹರನ್ನಾಗಿ ಮಾಡಿದರು. ಲೋಕಸಭೆಯಿಂದ ಹೊರಹಾಕಿದರು. ಕಾರಣ ನಾನು ಭ್ರಷ್ಟಾಚಾರದ ಬಗ್ಗೆ ಮೋದಿ ಅವರನ್ನು ಪ್ರಶ್ನಿಸಿದ್ದೆ. ಮೋದಿ ಹಾಗೂ ಅದಾನಿ ಅವರ ನಡುವಣ ಸಂಬಂಧವೇನು? ಕೇಳಿದೆ. ಬಿಜೆಪಿಯವರ ಈ ದಬ್ಬಾಳಿಕೆಗೆ ನಾನು ಹೆದರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.

Written by - Zee Kannada News Desk | Last Updated : Apr 17, 2023, 03:36 PM IST
  • ಬಿಜೆಪಿ ಹಾಗೂ ಆರ್ ಎಸ್ಎಸ್ ಅವರ ವಿಚಾರಧಾರೆ ಬಸವಣ್ಣನವರ ವಿಚಾರಧಾರೆಗೆ ವಿರುದ್ಧವಾಗಿದೆ.
  • ಈ ವಿರೋಧವಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು,
  • ಈ ಬಾರಿ ಕಾಂಗ್ರೆಸ್ 150 ಕ್ಷೇತ್ರಗಳ ಪ್ರಚಂಡ ಗೆಲುವು ಸಾಧಿಸಲಿದೆ ಎಂಬುದು ಎಲ್ಲರಿಗೂ ತಿಳಿದಿದೆ
ಬಿಜೆಪಿಯವರ ಈ ದಬ್ಬಾಳಿಕೆಗೆ ನಾನು ಹೆದರುವುದಿಲ್ಲ-ರಾಹುಲ್ ಗಾಂಧಿ title=
file photo

ಬೀದರ್: ನಾನು ಸಂಸತ್ತಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಅದಾನಿ ಅವರ ಜತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದೆ. ಅದಕ್ಕೆ ಅವರು ನನ್ನ ಮೈಕ್ ಆಫ್ ಮಾಡಿ ನನ್ನನ್ನು ಸಂಸತ್ತಿನಿಂದ ಅನರ್ಹರನ್ನಾಗಿ ಮಾಡಿದರು. ಲೋಕಸಭೆಯಿಂದ ಹೊರಹಾಕಿದರು. ಕಾರಣ ನಾನು ಭ್ರಷ್ಟಾಚಾರದ ಬಗ್ಗೆ ಮೋದಿ ಅವರನ್ನು ಪ್ರಶ್ನಿಸಿದ್ದೆ. ಮೋದಿ ಹಾಗೂ ಅದಾನಿ ಅವರ ನಡುವಣ ಸಂಬಂಧವೇನು? ಕೇಳಿದೆ. ಬಿಜೆಪಿಯವರ ಈ ದಬ್ಬಾಳಿಕೆಗೆ ನಾನು ಹೆದರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.

ಅವರು ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಬೀದರ್ ಬಸವಣ್ಣನವರ ಕರ್ಮಭೂಮಿ. ಬಸವಣ್ಣ ಶತಮಾನಗಳ ಹಿಂದೆಯೇ ಲೋಕತಂತ್ರದ ಬಗ್ಗೆ ಮಾತನಾಡಿದ್ದರು. ಇಂದು ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದ್ದರೆ ಅದಕ್ಕೆ ಅಡಿಪಾಯ ಹಾಕಿದವರು ಬಸವಣ್ಣನವರು. ಆದರೆ ದುರಂತ ಎಂದರೆ, ಇಂದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಬಿಜೆಪಿ ಹಾಗೂ ಆರ್ ಎಸ್ಎಸ್ ದಾಳಿ ಮಾಡುತ್ತಿದೆ. ಸಮಾಜದಲ್ಲಿ ದ್ವೇಷ ಬಿತ್ತಿ, ಹಿಂಸೆ ಹೆಚ್ಚಿಸುತ್ತಿದ್ದಾರೆ. ದೇಶದ ಸಂಪತ್ತನ್ನು ಕೆಲವರ ಕೈಗೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ..! ಸ್ವಪಕ್ಷಕ್ಕೆ ಶೆಟ್ಟರ್ ಖಡಕ್‌ ಸಂದೇಶ

ಬಿಜೆಪಿ ಹಾಗೂ ಆರ್ ಎಸ್ಎಸ್ ಅವರ ವಿಚಾರಧಾರೆ ಬಸವಣ್ಣನವರ ವಿಚಾರಧಾರೆಗೆ ವಿರುದ್ಧವಾಗಿದೆ. ಈ ವಿರೋಧವಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಕಾಂಗ್ರೆಸ್ 150 ಕ್ಷೇತ್ರಗಳ ಪ್ರಚಂಡ ಗೆಲುವು ಸಾಧಿಸಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. 40% ಕಮಿಷನ್ ಸರ್ಕಾರಕ್ಕೆ 40ಕ್ಕಿಂತ ಹೆಚ್ಚು ಕ್ಷೇತ್ರ ಸಿಗುವುದಿಲ್ಲ. ಹಿಮಾಚಲ ಪ್ರದೇಶ ಛತ್ತೀಸ್ ಗಡ ಚುನಾವಣೆ ಸಮಯದಲ್ಲಿ ನಾಯಕರು ನನ್ನ ಬಳಿ ಸಲಹೆ ಕೇಳಿದಾಗ ನಾನು ಎರಡು ಸಲಹೆ ನೀಡಿದೆ. ಜನರಿಗಾಗಿ ಮೂರ್ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ. ಈ ಯೋಜನೆಗಳನ್ನು ಸರ್ಕಾರ ಬಂದ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಿ.

ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ. ಅವರು ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ ಎಂದರು. ನಿಮಗೆ ಆ ಹಣ ಸಿಕ್ಕಿತೇ? ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು, ನಿಮಗೆ ಉದ್ಯೋಗ ಸಿಕ್ಕಿತೇ? ನೋಟು ರದ್ದು ಮಾಡಿ ಕಪ್ಪುಹಣ ನಿರ್ಮೂಲನೆ ಮಾಡುತ್ತೇವೆ ಎಂದರು. ಕಪ್ಪು ಹಣ ನಿರ್ಮೂಲನೆಯಾಯಿತೇ? ಬಿಜೆಪಿ ಕೇವಲ ಸುಳ್ಳಿನ ಆಶ್ವಾಸನೆ ನೀಡುತ್ತಾ ಬಂದಿದೆ. 

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಾಲ್ಕು ಯೋಜನೆ ಜಾರಿ ಮಾಡುವ ಘೋಷಣೆ ಮಾಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೋಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ, ಗೃಹಜ್ಯೋತಿ ಮೂಲಕ ಪ್ರತಿ ತಿಂಗಳು ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಬಡ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತ ಹಾಗೂ ಯುವನಿಧಿ ಯೋಜನೆ ಮೂಲಕ ನಿರುದ್ಯೋಗ ಪದವೀಧರ ಯುವಕರಿಗೆ 3 ಸಾವಿರ ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ನಿರುದ್ಯೋಗ ಭತ್ಯೆ ನೀಡಲಾಗುವುದು. 

ಮೋದಿ ಅವರು ಈ ದೇಶದಲ್ಲಿ ಕೇವಲ ಒಂದಿಬ್ಬರು ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷ ಈ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನ ಸಾಮಾನ್ಯರಿಗಾಗಿ ನೀಡಲಾಗುತ್ತಿವೆ. ಈ ನಾಲ್ಕು ಯೋಜನೆ ಕರ್ನಾಟಕ ರಾಜ್ಯದ ಜನರ ಬದುಕು ಬದಲಿಸಲಿದೆ.

ಬಿಜೆಪಿಯನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ 40% ಸರ್ಕಾರ ಎಂದು ಕರೆಯುತ್ತಾರೆ. ಈ ಬಿರುದು ಕೊಟ್ಟಿದ್ದು ನಾನಲ್ಲ. ರಾಜ್ಯದ ಜನ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ರಾಜ್ಯದ ಜನರು ಕಣ್ಣಾರೆ ಕಂಡಿದ್ದಾರೆ. ಪ್ರಧಾನಿ ಮೋದಿ ಅವರು ಎಲ್ಲೇ ಹೋದರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ರಾಜ್ಯದ ಗುತ್ತಿಗೆದಾರರ ಸಂಘದವರು ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪತ್ರ ಬರೆದರೆ ಅದಕ್ಕೆ ಯಾವುದೇ ಉತ್ತರವಿಲ್ಲ. ಇನ್ನು ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಯಲ್ಲಿ ನಡೆದಿರುವ ಅಕ್ರಮದಲ್ಲಿ ಬಿಜೆಪಿ ಶಾಸಕರ ಪುತ್ರ 8 ಕೋಟಿ ಲೂಟಿ ವೇಳೆ ಸಿಕ್ಕಿಬಿದಿದ್ದಾರೆ. ಈ ಬಗ್ಗೆ ಮೋದಿ ಮೌನವಾಗಿದ್ದಾರೆ. ನೇಮಕಾತಿ ಹಗರಣವಾದಾಗ ಸರ್ಕಾರ ಒಂದೇ ಒಂದು ಮಾತನಾಡಲಿಲ್ಲ. ಪಿಎಸ್ಐ, ಸಹಾಯಕ ಪ್ರಾಧ್ಯಾಪಕರು, ಜೆಇಇ ನೇಮಕಾತಿ ಅಕ್ರಮದ ಬಗ್ಗೆ ಮಾತನಾಡಲಿಲ್ಲ. 

ಇದನ್ನೂ ಓದಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೀಟು ಮೀಸಲಿಟ್ಟ ಕಾಂಗ್ರೆಸ್...!

ನಾನು ಸಂಸತ್ತಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಅದಾನಿ ಅವರ ಜತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದೆ. ಅದಕ್ಕೆ ಅವರು ನನ್ನ ಮೈಕ್ ಆಫ್ ಮಾಡಿ ನನ್ನನ್ನು ಸಂಸತ್ತಿನಿಂದ ಅನರ್ಹರನ್ನಾಗಿ ಮಾಡಿದರು. ಲೋಕಸಭೆಯಿಂದ ಹೊರಹಾಕಿದರು. ಕಾರಣ ನಾನು ಭ್ರಷ್ಟಾಚಾರದ ಬಗ್ಗೆ ಮೋದಿ ಅವರನ್ನು ಪ್ರಶ್ನಿಸಿದ್ದೆ. ಮೋದಿ ಹಾಗೂ ಅದಾನಿ ಅವರ ನಡುವಣ ಸಂಬಂಧವೇನು? ಕೇಳಿದೆ. ಬಿಜೆಪಿಯವರ ಈ ದಬ್ಬಾಳಿಕೆಗೆ ನಾನು ಹೆದರುವುದಿಲ್ಲ. ಕರ್ನಾಟಕ ರಾಜ್ಯದ ಜನರೂ ಹೆದರುವುದಿಲ್ಲ. ರಾಜ್ಯದ ಜನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. 40% ಕಮಿಷನ್ ಹಣ ನಿಮ್ಮ ಹಣ. ಈ ಹಣವನ್ನು ನಿಮ್ಮ ಆರೋಗ್ಯ, ಶಿಕ್ಷಣಕ್ಕೆ ಮೀಸಲಿಡಬೇಕು. ಕಳೆದ ಬಾರಿ ನೀವು ಬಿಜೆಪಿ ಸರ್ಕಾರಕ್ಕೆ ಅಧಿಕಾರ ನೀಡಿರಲಿಲ್ಲ. ಆದರೂ ಅವರು ಅಧಿಕಾರಕ್ಕೆ ಬಂದರು. ಬಿಜೆಪಿಯವರು ಭ್ರಷ್ಟಾಚಾರದ ಹಣದಲ್ಲಿ ಮೈತ್ರಿ ಸರ್ಕಾರ ಬೀಳಿಸಿ, 40% ಕಮಿಷನ್ ಲೂಟಿ ಮಾಡಿದರು. ಈ ಬಾರಿಯೂ ಈ ಲೂಟಿ ಹಣದಲ್ಲಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸಲಿದ್ದಾರೆ. ಹೀಗಾಗಿ ನೀವು ಕಾಂಗ್ರೆಸ್ ಪಕ್ಷವನ್ನು 150 ಕ್ಷೇತ್ರಗಳಲ್ಲಿ ಗೆಲ್ಲಿಸಲೇಬೇಕು. ಇಲ್ಲದಿದ್ದರೆ ಮತ್ತೆ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಾರೆ. ಬಿಜೆಪಿಗೆ 40 ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಬಿಡಬಾರದು.

ಮೋದಿ ಅವರು ನಾನು ಒಬಿಸಿ ಸಮುದಾಯಕ್ಕೆ ಅಪಮಾನ ಮಾಡಿದ್ದೇನೆ ಎಂದು ಹೇಳಿದ್ದಾರೆ. ನಾನು ಎಂದೂ ಯಾರಿಗೂ ಅಪಮಾನ ಮಾಡುವುದಿಲ್ಲ. ನರೇಂದ್ರ ಮೋದಿ ಅವರಿಗೆ ಒಬಿಸಿ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ, ಈ ಸಮುದಾಯಗಳಿಗೆ ರಾಜಕೀಯ, ಆರ್ಥಿಕ ಶಕ್ತಿ ತುಂಬಲಿ. ಹೀಗಾಗಿ ಶೇ.50ರಷ್ಟು ನಿಗದಿ ಮಾಡಿರುವ ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ. ಒಬಿಸಿ ಸಮುದಾಯಗಳಿಗೆ ಶಕ್ತಿ ತುಂಬಬೇಕಾದರೆ, ಒಬಿಸಿ, ದಲಿತರು, ಆದಿವಾಸಿಗಳು ಎಷ್ಟು ಜನ ಇದ್ದಾರೆ ಎಂದು ತಿಳಿಯಬೇಕು. 

ಯುಪಿಎ ಸರ್ಕಾರ 2011ರಲ್ಲಿ ಜಾತಿ ಗಣತಿ ಮಾಡಿಸಿದ್ದು,ಅದರ ಪ್ರಕಾರ ದೇಶದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತರ ಜನಸಂಖ್ಯೆ ಎಷ್ಟಿದೆ? ಎಂದು ಬಹಿರಂಗಪಡಿಸಲಿ. ಮೋದಿ ಸರ್ಕಾರ ಈ ಅಂಕಿ ಅಂಶಗಳನ್ನು ಯಾರಿಗೂ ನೀಡುತ್ತಿಲ್ಲ.ಜತೆಗೆ ಅದರ ಅನುಗುಣವಾಗಿ ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಆಯಾ ಸಮುದಾಯಗಳಿಗೆ ಅಧಿಕಾರ ನೀಡಲಿ. ಇಲ್ಲದಿದ್ದರೆ ಈ ಸರ್ಕಾರ ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ದ್ರೋಹ ಮಾಡಿದಂತೆ. ಬಿಜೆಪಿ ಸರ್ಕಾರ ಈ ಕೆಲಸ ಮಾಡದಿದ್ದರೆ ಕಾಂಗ್ರೆಸ್ ಸರ್ಕಾರ ಈ ಕೆಲಸ ಮಾಡಲಿದೆ. ನಾವು ಒಬಿಸಿ, ದಲಿತರು, ಆದಿವಾಸಿಗಳಿಗೆ ಶಕ್ತಿ ತುಂಬಲಿದೆ.

ದಲಿತರಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡಿ. ಮೋದಿ ಅವರು ಎಂದಿಗೂ ಈ ಕೆಲಸ ಮಾಡುವುದಿಲ್ಲ. ಅವರು ಒಬಿಸಿ ವರ್ಗಗಳಿಂದ ಮತ ಪಡೆಯುತ್ತಾರೆ ಆದರೆ ಆ ಸಮುದಾಯಗಳಿಗೆ ಶಕ್ತಿ ತುಂಬುವುದಿಲ್ಲ. ನಮ್ಮ ಸರ್ಕಾರ ಬಡವರಿಗಾಗಿ ನರೇಗಾ ಕಾರ್ಯಕ್ರಮ ನೀಡಿತು. ಒಬಿಸಿ ವಲಯಕ್ಕೆ ರಾಜಕೀಯ ಹಾಗೂ ಆರ್ಥಿಕ ಶಕ್ತಿ ತುಂಬಬೇಕು. ಮೋದಿ ಅವರು ಅಧಿಕಾರಕ್ಕೆ ಬಂದು 9 ವರ್ಷವಾಗಿದೆ ಈ ಸಮುದಾಯಕ್ಕೆ ಏನು ಮಾಡಿದೆ? 

ಮೋದಿ ಅವರ ಸರ್ಕಾರದಲ್ಲಿ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳ ಪೈಕಿ ಕೇವಲ 7% ಮಾತ್ರ ಹಿಂದುಳಿದವರು, ದಲಿತರು ಇದ್ದಾರೆ. ಇದು ಮೋದಿ ಅವರ ಕಾಳಜಿಯೇ? ಈ 7% ಅಧಿಕಾರಿಗಳನ್ನು ಸಣ್ಣಪುಟ್ಟ ಕೆಲಸಕ್ಕೆ ಮೀಸಲಿಟ್ಟಿದ್ದಾರೆ. ನಿಮ್ಮಿಂದ ಈ ಕೆಲಸ ಸಾಧ್ಯವಾಗದಿದ್ರೆ, ಅಧಿಕಾರ ಬಿಟ್ಟು ತೊಲಗಿ, ನಾವು ಈ ಕೆಲಸ ಮಾಡುತ್ತೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News