ಸಿಎಂ ಬೊಮ್ಮಾಯಿ ಸಚಿವ ಸಂಪುಟಕ್ಕೆ ನಾನು ಸೇರುವುದಿಲ್ಲ: ಜಗದೀಶ್ ಶೆಟ್ಟರ್

ನಾನು ಮುಖ್ಯಮಂತ್ರಿಯಾಗಿದ್ದವನು. ಸ್ವಾಭಿಮಾನ ಗೌರವದ ಹಿನ್ನೆಲೆ ಈ ನಿರ್ಧಾರ ಮಾಡಿದ್ದೇನೆ.

Written by - Zee Kannada News Desk | Last Updated : Jul 29, 2021, 03:21 PM IST
  • ಈಗ ಯಾರೇ ಸಿಎಂ ಆಗಿದ್ರೂ ನಾನು ಸಂಪುಟ ಸೇರುತ್ತಿರಲಿಲ್ಲ ಅಂತಾ ಜಗದೀಶ್ ಶೆಟ್ಟರ್ ಹೇಳಿದ್ದಾರೆ
  • ಸಚಿವ ಸಂಪುಟ ರಚನೆ ಹಿನ್ನೆಲೆ ಸಿಎಂ ಬೊಮ್ಮಾಯಿ ನಿವಾಸಕ್ಕೆ ಸಚಿವಾಕಾಂಕ್ಷಿಗಳು ಪರೇಡ್ ನಡೆಸಿದ್ದಾರೆ
  • ಇದೇ ಮೊದಲ ಬಾರಿಗೆ ಮಹಿಳಾ ಶಾಸಕಿಯೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ
ಸಿಎಂ ಬೊಮ್ಮಾಯಿ ಸಚಿವ ಸಂಪುಟಕ್ಕೆ ನಾನು ಸೇರುವುದಿಲ್ಲ: ಜಗದೀಶ್ ಶೆಟ್ಟರ್ title=
ಕ್ಯಾಬಿನೆಟ್ ನಿಂದ ಜಗದೀಶ್ ಶೆಟ್ಟರ್ ದೂರವುಳಿದಿದ್ದಾರೆ

ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ಬಸವರಾಜ್ ಬೊಮ್ಮಾಯಿಯವರ ಸಚಿವ ಸಂಪುಟಕ್ಕೆ ಸೇರುವುದಿಲ್ಲವೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಾಸಕನಾಗಿಯೇ ನಾನು ಕೆಲಸ ಮುಂದುವರಿಸುತ್ತೇನೆ, ಆದರೆ ಬೊಮ್ಮಾಯಿಯವರ ಸಂಪುಟಕ್ಕೆ ಸೇರುವುದಿಲ್ಲವೆಂದು ಹೇಳಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದವನು. ಸ್ವಾಭಿಮಾನ ಗೌರವದ ಹಿನ್ನೆಲೆ ಈ ನಿರ್ಧಾರ ಮಾಡಿದ್ದೇನೆ ಎಂದು ಕ್ಯಾಬಿನೆಟ್ ನಿಂದ ಜಗದೀಶ್ ಶೆಟ್ಟರ್ ದೂರವುಳಿದಿದ್ದಾರೆ. ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನಾನು ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಆಗ ಸಚಿವನಾಗಲು ನನಗೆ ಯಾವುದೇ ಮುಜುಗರವಿರಲಿಲ್ಲ. ಈಗ ಯಾರೇ ಸಿಎಂ ಆಗಿದ್ರೂ ನಾನು ಸಂಪುಟ ಸೇರುತ್ತಿರಲಿಲ್ಲ ಅಂತಾ ಶೆಟ್ಟರ್ ಹೇಳಿದ್ದಾರೆ.

ನಾನು ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಆಗಿದ್ದವನು. ಬಸವರಾಜ್ ಬೊಮ್ಮಾಯಿ ಅಥವಾ ಯಾರೇ ಸಿಎಂ ಆಗಿದ್ರೂ ಕೂಡ ನಾನು ಸಂಪುಟ ಸೇರುತ್ತಿರಲಿಲ್ಲ. ಈ ಬಗ್ಗೆ ಈಗಾಗಲೇ ನೂತನ ಸಿಎಂ ಬಸವರಾಜ್ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.  

ನಾನು 10 ವರ್ಷ ವಿಪಕ್ಷದ ನಾಯಕನಾಗಿ, ಸ್ಪೀಕರ್ ಆಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮತ್ತು ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ನನಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ನನಗೆ ಪಕ್ಷ ಎಲ್ಲ ರೀತಿಯ ಜವಾಬ್ದಾರಿ ಮತ್ತು ಗೌರವವನ್ನು ಕೊಟ್ಟಿದೆ. ಹೀಗಾಗಿ ನಾನು ಸಂಪುಟ ಸೇರುವುದಿಲ್ಲವೆಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: NEW CM BUMPER: ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಮಾಸಾಶನ ಹೆಚ್ಚಳ ಮಾಡಿ ನೂತನ ಸಿಎಂ ಘೋಷಣೆ

ಸಿಎಂ ನಿವಾಸಕ್ಕೆ ಸಚಿವಾಕಾಂಕ್ಷಿಗಳ ಪರೇಡ್..!

ಶೀಘ್ರವೇ ಸಚಿವ ಸಂಪುಟ ರಚನೆಯಾಗಲಿದೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಸಚಿವಾಕಾಂಕ್ಷಿಗಳ ದಂಡು ಸಿಎಂ ಬಸವರಾಜ್ ಬೊಮ್ಮಾಯಿಯವರ ನಿವಾಸಕ್ಕೆ ದಾಂಗುಡಿ ಇಟ್ಟಿತ್ತು. ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಕೊಟಾ ಶ್ರೀನಿವಾಸ್ ಪೂಜಾರಿ, ರಾಜುಗೌಡ ನಾಯಕ್, ಅರಗಜ್ಞಾನೇಂದ್ರ ಸೇರಿ ಅನೇಕರು ತಮ್ಮನ್ನು ಕೂಡ ಸಂಪುಟಕ್ಕೆ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರಂತೆ.

ಮುಂದಿನ ವಾರ ಸಂಪುಟ ರಚನೆಯಾಗುವ ಸಾಧ್ಯತೆ ಇದ್ದು, ಈ ಬಾರಿಯೂ ಎಲ್ಲಿ ಸಚಿವ ಸ್ಥಾನ ಕೈತಪ್ಪಬಹುದೆಂಬ ಆತಂಕದಲ್ಲಿ ಅನೇಕ ಶಾಸಕರಿದ್ದಾರೆ. ಈ ಹಿನ್ನೆಲೆ ಕೆಲವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರಂತೆ.  

ಇದನ್ನೂ ಓದಿ: ನೂತನ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ನೀಡಿದ ಸಲಹೆ ಏನು ಗೊತ್ತಾ..?

ರಾಜ್ಯಕ್ಕೆ ಮೊದಲ ಮಹಿಳಾ ಡಿಸಿಎಂ..?

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಶಾಸಕಿಯೊಬ್ಬರಿಗೆ  ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‍ಗೆ ಡಿಸಿಎಂ ಸ್ಥಾನ ನೀಡಲು ಹೈಕಮಾಂಡ್ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರಂತೆ. ಮುಂಬರುವ ಸ್ಥಳೀಯ ಸಂಸ್ಥೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪೂರ್ಣಿಮಾ ಶ್ರೀನಿವಾಸ್ ಅವರನ್ನು ಡಿಸಿಎಂ ಮಾಡಲು ಪ್ಲಾನ್ ನಡೆಯುತ್ತಿದೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News