ನವದೆಹಲಿ: ಜೂನಿಯರ್ ಜಡ್ಜ್ ಗಳನ್ನು ಸುಪ್ರೀಂಕೋರ್ಟ್ ಗೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಿರುವುದಕ್ಕೆ ಸುಪ್ರೀಂಕೋರ್ಟ್ ನ ನಿವೃತ್ತ ಮುಖ್ಯನ್ಯಾಯಾಧೀಶರಾದ ಆರ್.ಎಂ.ಲೋಧಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಜನವರಿ 10ಕ್ಕೆ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೋಗಯ್ ನೇತೃತ್ವದ ಕೊಲಿಜಿಯಂ ಕರ್ನಾಟಕ ಹೈಕೋರ್ಟ್ ನ ಜಸ್ಟಿಸ್ ದಿನೇಶ್ ಮಹೇಶ್ವರಿ, ಮತ್ತು ದೆಹಲಿ ಹೈಕೋರ್ಟ್ ನ ಸಂಜೀವ್ ಖನ್ನಾ ಅವರ ಹೆಸರುಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು, ಇದಕ್ಕೂ ಮೊದಲು ಹಿರಿಯ ನ್ಯಾಯಾಧೀಶರಾದ ಪ್ರದೀಪ್ ನಂದ್ರಾಜೋಗ್ ಮತ್ತು ರಾಜೇಂದ್ರ ಮೆನನ್ ಅವರ ಹೆಸರುಗಳನ್ನು ಡಿಸೆಂಬರ್ ತಿಂಗಳಲ್ಲೇ ಪರಿಗಣಿಸಲಾಗಿತ್ತು.
ಈಗ ಜೂನಿಯರ್ ಜಡ್ಜ್ ಗಳ ನೇಮಕದ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಜಸ್ಟಿಸ್ ಲೋಧಾ "ನಾನು ಯಾವಾಗಲು ಹೇಳುವುದಿಷ್ಟೇ ಕೊಲಿಜಿಯಂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು, ಈಗ ಏಕಾಏಕಿ ನಿರ್ಧಾರವನ್ನು ಯಾಕೆ ಬದಲಾಯಿಸಲಾಯಿತು ಎನ್ನುವುದರ ಕುರಿತು ಜನರಿಗೆ ತಿಳಿಯುವಂತಾಗಬೇಕು"ಎಂದು ಲೋಧಾ ಪ್ರಶ್ನಿಸಿದರು.
ಇನ್ನೊಂದೆಡೆ ಸುಪ್ರೀಂಕೋರ್ಟ್ ಗೆ ಜೂನಿಯರ್ ಜಡ್ಜ್ ಗಳನ್ನು ನೇಮಕ ಮಾಡಿರುವುದಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಆಕ್ಷೇಪ ವ್ಯಕ್ತಪಡಿಸಿದೆ.